ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕಳ್ಳತನ! | ಜನತಾ ನ್ಯೂಸ್
ಬಾಗಲಕೋಟೆ : ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕಳ್ಳತನ ಮಾಡುತಿದ್ದ ವ್ಯಕ್ತಿ ಹಾಗೂ ಆತನಿಗೆ ಸಹಾಯ ಮಾಡುತ್ತಿದ್ದ ಹೆಂಡತಿ ಇಬ್ಬರನ್ನೂ ಬಾಗಲಕೋಟೆ ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ಯಲ್ಲಪ್ಪ ಶಿವಪುರೆ (40) ಪಕ್ಕದ ಮಹಾರಾಷ್ಟ್ರ ರಾಜ್ಯದ ಸೊಲ್ಹಾಪುರ ನಗರದ ನಿವಾಸಿ. ಸೊಲ್ಹಾಪುರ ಸುರೇಶ್ ಕಳ್ಳತನ ಮಾಡುವುದಕ್ಕೆ ಆಗಾಗ ಕರ್ನಾಟಕಕ್ಕೆ ಬರುತ್ತಿದ್ದ. ಹೀಗೆ ಕಳ್ಳತನಕ್ಕೆ ಬರುತ್ತಿದ್ದ ಸುರೇಶ್ ಬೆತ್ತಲೆಯಾಗಿಯೇ ಒಂಟಿ ಮನೆಗೆ ನುಗ್ಗುತ್ತಿದ್ದ. ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದ.
ಜನರು ಹಿಡಿಯಲು ಬಂದರೆ ಅವರಿಗೆ ಸಿಗಬಾರದು ಎನ್ನುವ ಉದ್ದೇಶದಿಂದ ಎಣ್ಣೆ ಬಳಿದುಕೊಳ್ಳಲಾಗುತ್ತಿತ್ತು. ಅಕಸ್ಮಾತ್ ಕಳ್ಳತನದ ಸಮಯದಲ್ಲಿ ಸಿಕ್ಕರು ಎಣ್ಣೆಯಿಂದ ಸುಲಭದಲ್ಲಿ ತಪ್ಪಿಸಿಕೊಳ್ಳಬಹುದು ಎಂದು ಪ್ಲಾನ್ ರೋಪಿಸಿದ್ದ. ಈತ ಒಳಗೆ ಕಳ್ಳತನ ಮಾಡುತ್ತಿದ್ದರೆ, ಪತ್ನಿ ಹೊರಗೆ ನಿಂತು ಯಾರಾದರೂ ಬರುತ್ತಾರೋ ಗಮನಿಸುತ್ತಿದ್ದಳು.
ಈ ದಂಪತಿ ಮೇಲೆ ಮಹಾರಾಷ್ಟ್ರ, ಕರ್ನಾಟಕ ಸೇರಿ ಒಟ್ಟು 36 ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಕರ್ನಾಟಕದಲ್ಲಿ ಬಾಗಲಕೋಟೆ, ಧಾರವಾಡ, ಗದಗ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಬಾದಾಮಿ ಪೊಲೀಸ್ ಸಿಪಿಐ ರಮೇಶ್ ಹಾನಾಪೂರ ನೇತೃತ್ವದಲ್ಲಿ ಕಳ್ಳರಿಗಾಗಿ ಬಲೆ ಬೀಸಲಾಗಿತ್ತು. ಕೊನೆಗೂ ಖದೀಮರು ಸಿಕ್ಕಿಬಿದ್ದಿದ್ದಾರೆ. ಈ ದಂಪತಿಯಿಂದ ಹತ್ತೂವರೆ ಲಕ್ಷ ಮೌಲ್ಯದ ಚಿನ್ನಾಭರಣ, 15 ಸಾವಿರ ರೂ. ಬೆಲೆಬಾಳುವ ಬೆಳ್ಳಿ ಆಭರಣ, ಕಳ್ಳತನಕ್ಕೆ ಬಳಸುತ್ತಿದ್ದ ಮೋಟರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಇವರ ವಿರುದ್ಧ 46 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.